Slide
Slide
Slide
previous arrow
next arrow

‘ದಲಿತರ ಪರ ಹೋರಾಟ ಮಾಡುವುದು ಅಸಹ್ಯ ಎಂದ ಕಾಂಗ್ರೆಸ್ ಮುಖಂಡರು ಜನತೆಯ ಕ್ಷಮೆ ಕೇಳಲಿ’

300x250 AD

ಸುದ್ದಿಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿದ ಅನಂತಮೂರ್ತಿ ಹೆಗಡೆ: ಜೂ.14ಕ್ಕೆ ಆಸ್ಪತ್ರೆಗಾಗಿ ಸಮಾನ ಮನಸ್ಕರ ಸಭೆ

ಶಿರಸಿ: ಕ್ಷೇತ್ರದ ಜನರೇ ಸುಳ್ಳುಗಾರರು ಎಂದು ಹೇಳುವ ಮೂಲಕ ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಗೌಡ್ರು ಜನರಿಗೆ ಅವಮಾನ ಮಾಡುತ್ತಿದ್ದಾರೆ. ಜೊತೆಗೆ ಕ್ಷೇತ್ರದ ಎಸ್ಸಿ-ಎಸ್ಟಿ ಸಮುದಾಯ, ಸಿದ್ದಿ ಜನಾಂಗದ ಜನ ನಮಗೆ ರಸ್ತೆ ಬೇಕು ಎಂದು ಕೇಳಿದರೆ “ಅಸಹ್ಯ” ಎಂದು ಹೇಳಿರುವ ಅವರ ಮಾತು ಆ ಜನಾಂಗಕ್ಕೆ ಮಾಡಿದ ಜಾತಿ ನಿಂದನೆ ಅಲ್ಲವೇ? ಹಾಗಾಗಿ ಕೂಡಲೇ ಜನತೆಯ ಕ್ಷಮೆಯನ್ನು ಕೇಳಬೇಕು ಎಂದು ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ, ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.

ಅವರು ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಮಾತೆತ್ತಿದರೆ ಮೂವತ್ತು ವರ್ಷದ ಸಮಸ್ಯೆ ಹೇಳುವ ನೀವು, ಕಾಂಗ್ರೆಸ್ ಪಕ್ಷದ ದೇಶಪಾಂಡೆ ಅವರೇ ಐದು ಬಾರಿ ಉಸ್ತುವಾರಿ ಸಚಿವರಾಗಿದ್ದರು. ಯಾಕೆ ರಸ್ತೆಯನ್ನು ಅಭಿವೃದ್ಧಿಪಡಿಸಲಿಲ್ಲ ? ಹಿಂದೆ ಭೀಮಣ್ಣನವರು ಜಿಲ್ಲಾ ಅಧ್ಯಕ್ಷರಾಗಿದ್ದವರು. ಕಾಂಗ್ರೆಸ್ ಸರ್ಕಾರ ಇತ್ತು.. ನೀವು ಆಗ ಯಾಕೆ ಸಮಸ್ಯೆ ಬಗ್ಗೆ ಧ್ವನಿ ಎತ್ತಲಿಲ್ಲ? ಈಗ ರಸ್ತೆ ಹಾಳಾಗಿದೆ ಸರಿ ಮಾಡಿ ಅಂದ್ರೆ 30 ವರ್ಷದ ಬಗ್ಗೆ ಮಾತನಾಡಲಿಕ್ಕೆ ನಾಚಿಕೆಯಾಗುವುದಿಲ್ಲವೇ ? ದಯವಿಟ್ಟು ತಾವುಗಳು ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂದು ಖಡಕ್ಕಾಗಿ ಕೇಳಿದರು.

ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ವಿಧಾನ ಸಭಾಧ್ಯಕ್ಷರಾಗಿದ್ದಾಗ ಮಾಡಿದ್ದಾರೆ. ಹಿಂದೆ ನೂರಾರು ಊರುಗಳು ಶಿರಗಣಿ ಥರಾನೇ ಇತ್ತು‌. ಇವತ್ತು ಅವೆಲ್ಲ ಊರಿಗೆ ರಸ್ತೆ ಆಗಿದೆ. ಕ್ಷೇತ್ರ ಅಭಿವೃದ್ಧಿ ಮಾಡಿದ್ದು ಕಾಗೇರಿಯವರಲ್ಲವೇ? ಜನರ ಬಾಯಿಂದಾನೆ ನೀವು ಕೇಳಬಹುದು. ಮತ್ತಿಘಟ್ಟ, ಮಾಡಮನೆ, ಕೆಳಗಿನಕೇರಿ ವಿಚಾರವಾಗಿ 50 ಸಾವಿರ ರೂಪಾಯಿ ಶಾಸಕರು ಕೊಟ್ಟಿದ್ದು ದೊಡ್ಡ ಸುಳ್ಳು, ಬೇರೆ ರಸ್ತೆಯನ್ನು ಮಾಡಲಿಕ್ಕೆ ಇವರು ಶಿಫಾರಸ್ಸು ಮಾಡಿದ್ದು ಎರಡನೇ ಸುಳ್ಳು, ರಸ್ತೆ ಸಂಪರ್ಕ ಕಡಿದು 15 ದಿವಸ ಆದರೂ ಕೂಡ ಶಾಸಕರು ಬರದೇ, ಆನಂತರ ಹಲವಾರು ಬಾರಿ ಶಾಸಕರ ಕಚೇರಿಯನ್ನು ಅಲೆದು ಜನ ಸುಸ್ತಾಗಿದ್ದರು. ನಂತರ ಜನರೇ ಸ್ವಂತ ಖರ್ಚಿನಿಂದ ರಸ್ತೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಹೊರತು ಶಾಸಕರಾಗಲಿ, ಈ ಬ್ಲಾಕ್ ಅಧ್ಯಕ್ಷರಾಗಲಿ ಕೊಟ್ಟಿದ್ದಲ್ಲ. ಊರಿನ ಜನರೇ ನನ್ನನ್ನು ಸಂಪರ್ಕಿಸಿದ ಮೇಲೆ ನಾನು ಅವರ ಜೊತೆಗೆ ಹೋರಾಟದಲ್ಲಿ ಪಾಲ್ಗೊಂಡಿದ್ದು, ಸಂಸದ ಕಾಗೇರಿಯವರ ಆದೇಶದ ಮೇಲೆ ಜಿಲ್ಲಾಧಿಕಾರಿಗಳು ತುರ್ತಾಗಿ ಎನ್ ಡಿ ಆರ್ ಎಫ್ ಮುಖಾಂತರವಾಗಿ ರಸ್ತೆ ನಿರ್ಮಾಣಕ್ಕಾಗಿ ಆದೇಶ ಮಾಡಿದ್ದಾರೆ‌. ಈಗ ಮತ್ತೀಘಟ್ಟದ ಕೆಲಸ ನಡೆಯುತ್ತಿದೆ ಅದಕ್ಕಾಗಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕಾಂಗ್ರೆಸಿನ ಗ್ರಾಮೀಣ ಘಟಕ ಅಧ್ಯಕ್ಷ ರಾಮಚಂದ್ರ ಮರಾಠಿ, ಬಳಿಗೆ ಅಲ್ಲಿಯ ಜನರು ಹೋಗಿ ಒಮ್ಮೆ ಶಾಸಕರನ್ನು ನಮ್ಮ ರಸ್ತೆ ನೋಡಲಿಕ್ಕೆ ಕರೆದುಕೊಂಡು ಬನ್ನಿ ಎಂದರೆ ಶಾಸಕರು ನೀ ಸಾಕಿದ ಕೋಳಿಯಲ್ಲ ಹೋಗು ಎಂದಿದ್ದಾರೆ. ತಪ್ಪನ್ನ ಒಪ್ಪಿಕೊಂಡು ಜನರ ಕೆಲಸವನ್ನ ಮಾಡಿಕೊಡಬೇಕೆ ಹೊರತು ಜನರನ್ನೇ ಸುಳ್ಳರು, ಮೋಸಗಾರರು ಅಂದರೆ ಮುಂದಿನ ಎಲೆಕ್ಷನ್ ನಲ್ಲಿ ತಕ್ಕ ಪಾಠವನ್ನು ನಿಮಗೆ ಕಲಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಶಿರಗುಣಿ ವಿಚಾರದಲ್ಲಿಯೂ ಜೂನ್ 15 ವರೆಗೆ ಸಮಯ ಕೊಟ್ಟಿದ್ದೇವೆ. ಕೆಲಸ ಆಗಿಲ್ಲವೆಂದರೆ ಮತ್ತೆ ಹೋರಾಟ ಅನಿವಾರ್ಯ ಎಂದರು. ಜನರು ತಮಗೆ ಆದ ನೋವನ್ನು ಹೇಳಿಕೊಂಡಿದ್ದಾರೆ ಹೊರತು ಯಾವುದೇ ಸುಳ್ಳು ಹೇಳಿಲ್ಲ ಎಂದರು.

ಎಲ್ಲರ ಸಹಕಾರದಿಂದ ಹೋರಾಟಗಳು ಯಶಸ್ವಿ: ಜೂ.14ಕ್ಕೆ ಆಸ್ಪತ್ರೆಗಾಗಿ ಸಮಾನ ಮನಸ್ಕರ ಸಭೆ

ಕದಂಬ ಕನ್ನಡ ಪ್ರತ್ಯೇಕ ಜಿಲ್ಲಾ ಹೋರಾಟ ಗ್ರಾಮ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಣೆ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಹೇರೂರು, ತಟ್ಟಿಕೈ ಭಾಗದಲ್ಲಿ ಯಶಸ್ವಿಯಾಗಿದೆ. ನಿಲೇಕಣಿ ರಸ್ತೆ ಹೋರಾಟ ಸಹ, ಯಶಸ್ವಿಯಾಗಿದ್ದು ರಸ್ತೆಯಲ್ಲಿದ್ದ ಹೊಂಡವನ್ನು ತುಂಬಲಾಗಿದೆ. ಶಿರಸಿ ಬಸ್ ಸ್ಟಾಂಡ್ ನ. 6, 2024 ರಂದೇ ಕಾಮಗಾರಿ ಮುಗಿದಿದ್ದರೂ ಸಹ, ಶಾಸಕರು ನಾಲ್ಕು ತಿಂಗಳುಗಳ ಕಾಲ ಉದ್ಘಾಟನೆ ಮಾಡಲಿಲ್ಲ. ನಂತರದಲ್ಲಿ ನಾನು ಎರಡು ಬಾರಿ ಪತ್ರಿಕಾ ಗೋಷ್ಟಿ ನಡೆಸಿ ಆಗ್ರಹಿಸಿ, ಹೋರಾಟ ನಡೆಸಿದ ಮೇಲೆ ಮಾ.28 ರಂದು ಉದ್ಘಾಟನೆ ಮಾಡಿದ್ದಾರೆ. ಈ ವಿಚಾರದಲ್ಲಿಯೂ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಮತ್ತಿಘಟ್ಟ ರಸ್ತೆ ಹೋರಾಟಕ್ಕೆ ಜಯ ಸಿಕ್ಕಿದ್ದು, ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಇನ್ನು ಶಿರಸಿ ಸರಕಾರಿ ಆಸ್ಪತ್ರೆಗೆ ಸಂಬಂಧಿಸಿ ಪ್ರತಿದಿನ ಸಾವಿರಾರು ಜನ ಆಸ್ಪತ್ರೆಗಾಗಿ ಮಂಗಳೂರಿಗೆ, ಹುಬ್ಬಳ್ಳಿ, ಶಿವಮೊಗ್ಗ ಹೋಗುತ್ತಿದ್ದಾರೆ ಎಂದು ಅರಿವಿದ್ದರೂ, ಕಳೆದ ಸುಮಾರು 8 ತಿಂಗಳಿಂದ ಆಸ್ಪತ್ರೆ ಬಗ್ಗೆ ಹಲವಾರು ಹೋರಾಟ ನಡೆದರೂ “ನೋಡಿ ನಾವು ಮಾಡಲಿಲ್ಲ, ಹೋರಾಟಕ್ಕೆ ಸೊಪ್ಪು ಹಾಕಲಿಲ್ಲ”, ಹೋರಾಟ ಏನಾಯಿತು ಅಂತ ಜಗದೀಶ್ ಗೌಡ್ರು ಕೇಳಿ ವಿಕೃತಿ ಮೆರೆದಿದ್ದಾರೆ, ನಿಜಕ್ಕೂ ಇದೊಂದು ಅಮಾನವೀಯ ನಡೆಯಾಗಿದೆ. ಅಸ್ಪತ್ರೆಯನ್ನು ಹೇಗೆ ಮಾಡಿಸಬೇಕೆಂದು ನಮಗೆ ಗೊತ್ತಿದೆ. ಬಡವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ಸಂಬಂಧ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲು ಸಮಾನ ಮನಸ್ಕರು ಶನಿವಾರದ ಸಭೆಯಲ್ಲಿ ಭಾಗವಹಿಸಬೇಕೆಂದು‌ ಅವರು ವಿನಂತಿಸಿದರು.

300x250 AD

ಸುದ್ದಿಗೋಷ್ಟಿಯಲ್ಲಿ ಮತ್ತೀಘಟ್ಟ ಗ್ರಾಮಸ್ಥರಾದ ನಾರಾಯಣ ಹೆಗಡೆ,ದಾಮೋದರ ಸಿದ್ದಿ, ಗಣಪತಿ‌ ನಾಯ್ಕ, ವಿನಯ ಹೆಗಡೆ, ಹಾಲಪ್ಪ ಜಕ್ಕಣ್ಣನವರ್, ನಾಗೇಶ‌ ಸಿದ್ದಿ, ರೇಣುಕಾ‌ ಸಿದ್ದಿ, ನಾಗರಾಜ ಹೆಗಡೆ ಇನ್ನಿತರರು ಇದ್ದರು.

ಖೋಟ್ :

ಮತ್ತೀಘಟ್ಟ ರಸ್ತೆ ಸರಿಪಡಿಸಲು ಶಾಸಕ ಭೀಮಣ್ಣನವರು 50,000 ಹಣವನ್ನು ನೀಡಿದ್ದಾರೆ ಎಂಬುದಕ್ಕೆ ಸಾಕ್ಷ್ಯ ನೀಡಲಿ. ಯಾರಿಗೆ ಹಣವನ್ನು ನೀಡಿದ್ದಾರೆ ಎಂಬುದನ್ನು ಜಗದೀಶ್ ಗೌಡರು ಬಹಿರಂಗ ಪಡಿಸಲಿ. ಅನಂತಮೂರ್ತಿ ಅವರ ಜನಪರ ಹೋರಾಟವನ್ನು ಅಸಹ್ಯ ಎನ್ನುವುದು ಸರಿಯಲ್ಲ. ಈ ಕಾಂಗ್ರೆಸ್ ಸರಕಾರದಲ್ಲಿ ಗ್ಯಾರಂಟಿ ಭಾಗ್ಯಗಳಿಂದ ಅಭಿವೃದ್ಧಿ ನಡೆಯುತ್ತಿಲ್ಲ.

  • ನಾರಾಯಣ ಹೆಗಡೆ, ಗ್ರಾಮ ಪಂ‌. ಸದಸ್ಯ, ಮತ್ತೀಘಟ್ಟ

ಶಾಸಕರು‌ 50 ಸಾವಿರ ನೀಡಿದ್ದಾರೆ ಎಂಬುದು ಅಪ್ಪಟ ಸುಳ್ಳು. 50,000 ಅಲ್ಲ, ಐದು ರೂಪಾಯಿಯನ್ನೂ ಯಾರೂ ನೀಡಲಿಲ್ಲ. ಮತ್ತೀಘಟ್ಟ ರಸ್ತೆಗೆ ನಾವೇ ಸ್ವಂತ ದುಡ್ಡಿನಲ್ಲಿ ರಸ್ತೆಯನ್ನು ನಿರ್ಮಿಸಿಕೊಂಡಿದ್ದೆವು. ಯಾವ ಅಧಿಕಾರಿಗಳು,‌ ಜನಪ್ರತಿನಿಧಿಗಳು ಬಂದಿಲ್ಲ. ನಾವೆಲ್ಲರು ಗ್ರಾಮಸ್ಥರು ಸೇರಿ ಅನಂತಮೂರ್ತಿ ಹೆಗಡೆ ಅವರ ಬಳಿ ಹೋಗಿ, ಹೋರಾಟ ಮಾಡಲು ನಾವೇ ವಿನಂತಿಸಿಕೊಂಡಿದ್ದೇವೆ. ನಂತರದಲ್ಲಿ ಜಿಲ್ಲಾಧಿಕಾರಿಗಳ ಬಳಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಹೋರಾಟ ಮಾಡಿದ ಮೇಲೆ ಈಗ ರಸ್ತೆ ಕೆಲಸ ನಡೆಯುತ್ತಿದೆ. — ದಾಮೋದರ ಸಿದ್ದಿ, ಮತ್ತೀಘಟ್ಟ ಗ್ರಾಮಸ್ಥರು

ಶಿರಸಿ ಸರಕಾರಿ ಆಸ್ಪತ್ರೆಗಾಗಿ ರಾಜ್ಯಮಟ್ಟದ ಹೋರಾಟ ಅತ್ಯಾವಶ್ಯಕ. ಆಸ್ಪತ್ರೆಯ ಕಟ್ಟಡಕ್ಕೆ ರೂ. 112 ಕೋಟಿ ಮತ್ತು ಉಪಕರಣಕ್ಕಾಗಿ ರೂ. 30 ಕೋಟಿ ಹಣ ಮೀಸಲಿಡಲಾಗಿತ್ತು. ಆದೇಶದನ್ವಯ 80% ಮುಗಿದ ಬಳಿಕ ಯಂತ್ರೋಪಕರಣ ಖರೀದಿ ಮತ್ತು ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ 80 ಪ್ರತಿಶತ ಕಾಮಗಾರಿ ಮುಗಿದು ಎಂಟು ತಿಂಗಳ ಕಳೆದರೂ ಇನ್ನೂ ಯಾವುದೇ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಆ ಕಾರಣದಿಂದ ಶಿರಸಿಯ ಜನತೆಯ ಒಡಗೂಡಿ ಮುಂದಿನ ಹೋರಾಟದ ರೂಪರೇಷೆ ಬಗ್ಗೆ ಚರ್ಚಿಸಲು ಸಮಾನ ಮನಸ್ಕರ ಸಭೆಯನ್ನು ಜೂ.14, ಶನಿವಾರ ಸಂಜೆ 4 ಗಂಟೆಗೆ ಶಿರಸಿಯ ಸಾಮ್ರಾಟ್ ಹೊಟೆಲ್ ಎದುರಿನ ನೆಮ್ಮದಿ ಕುಟೀರದಲ್ಲಿ ಸೇರಲು ನಿರ್ಧರಿಸಲಾಗಿದೆ.

  • ಅನಂತಮೂರ್ತಿ ಹೆಗಡೆ, ಬಿಜೆಪಿ ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ
Share This
300x250 AD
300x250 AD
300x250 AD
Back to top